ಐಸಿಸಿ ಪುರುಷರ ಟಿ20 ವಿಶ್ವಕಪ್ 2026ಕ್ಕೆ ಇನ್ನೂ ಸಮಯ ಇದ್ದರೂ, ಭಾರತ–ಪಾಕಿಸ್ತಾನ ಪಂದ್ಯ ಈಗಲೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಫೆಬ್ರುವರಿ 15ರಂದು ಕೊಲಂಬೊದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಗುಂಪು ಹಂತದ ಪಂದ್ಯದಲ್ಲಿ ಭಾರತದ ವಿರುದ್ಧ ಆಡದಿರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೆಗೆದುಕೊಂಡ ನಿರ್ಧಾರ, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ನಿರ್ಧಾರದಿಂದ ಪಿಸಿಬಿ ಸಂಪೂರ್ಣವಾಗಿ ಏಕಾಂಗಿಯಾಗಿದ್ದು, ಇದೀಗ ಪಾಕಿಸ್ತಾನ ಮೇಲೆ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಜಾ ವರದಿಗಳ ಪ್ರಕಾರ, ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಕೂಡ ಈ ವಿಷಯದಲ್ಲಿ ಪಿಸಿಬಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಪಿಸಿಬಿಗೆ ಇಮೇಲ್ ಕಳುಹಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ತನ್ನ ಇಮೇಲ್ನಲ್ಲಿ, ಭಾರತ–ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ಟಿ20 ವಿಶ್ವಕಪ್ಗೆ ಭಾರೀ ಆರ್ಥಿಕ ನಷ್ಟ ಸಂಭವಿಸಬಹುದು ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ. ಜಾಗತಿಕವಾಗಿ ಅತಿಹೆಚ್ಚು ವೀಕ್ಷಣೆ ಹೊಂದಿರುವ ಕ್ರಿಕೆಟ್ ಪಂದ್ಯಗಳಲ್ಲಿ ಭಾರತ–ಪಾಕಿಸ್ತಾನ ಮುಖಾಮುಖಿ ಪ್ರಮುಖವಾಗಿದ್ದು, ಬ್ರಾಡ್ಕಾಸ್ಟಿಂಗ್, ಟಿಕೆಟ್ ಮಾರಾಟ, ಪ್ರಾಯೋಜಕರು ಹಾಗೂ ಜಾಹೀರಾತು ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂಬ ಆತಂಕವನ್ನು ಎಮಿರೇಟ್ಸ್ ಮಂಡಳಿ ವ್ಯಕ್ತಪಡಿಸಿದೆ.
‘ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಪಾಕಿಸ್ತಾನದೊಂದಿಗೆ ದೀರ್ಘಕಾಲದ ಬಾಂಧವ್ಯವನ್ನು ಹೊಂದಿದೆ. ಹಿಂದಿನ ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್ಗೆ ನಮ್ಮ ವೇದಿಕೆಗಳನ್ನು ನೀಡಿದ್ದೇವೆ, ಪಂದ್ಯಗಳನ್ನು ಆಯೋಜಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಈ ನಿರ್ಧಾರವು ಎಲ್ಲರಿಗೂ ಹಾನಿಕಾರಕವಾಗಬಹುದು’ ಎಂದು ಪಿಸಿಬಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಈ ನಡುವೆ, ಈ ವಿವಾದದ ಕುರಿತು ಲಾಹೋರ್ನಲ್ಲಿ ನಿರ್ಣಾಯಕ ಸಭೆ ನಡೆದಿದ್ದು, ಐಸಿಸಿ, ಪಿಸಿಬಿ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧಿಕಾರಿಗಳು ಭಾಗವಹಿಸಿದ್ದ
ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖವಾಜಾ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹಾಗೂ ಬಿಸಿಬಿ ಅಧ್ಯಕ್ಷ ಅಮೀನುಲ್ ಇಸ್ಲಾಂ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಪಾಕಿಸ್ತಾನದ ಬಹಿಷ್ಕಾರ ನಿರ್ಧಾರದ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ.
ಪಾಕಿಸ್ತಾನ ಮಾಧ್ಯಮಗಳ ಪ್ರಕಾರ, ಸಭೆಯಲ್ಲಿ ವಿವಿಧ ಆಯ್ಕೆಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಪಿಸಿಬಿ ತನ್ನ ನಿಲುವಿನಲ್ಲಿ ಯೂ-ಟರ್ನ್ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾರತ ವಿರುದ್ಧದ ಪಂದ್ಯವನ್ನು ಆಡದೇ ಇದ್ದರೆ, ಐಸಿಸಿಯಿಂದ ಶಿಸ್ತು ಕ್ರಮ, ಅಂಕ ಕಳೆದುಕೊಳ್ಳುವ ಭೀತಿ ಹಾಗೂ ಭವಿಷ್ಯದ ಟೂರ್ನಿಗಳ ಆತಿಥ್ಯ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಐಸಿಸಿ ಕೂಡ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಪಿಸಿಬಿ ತನ್ನ ಅಂತಿಮ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ. ಇಮ್ರಾನ್ ಖವಾಜಾ ಮತ್ತು ಮೊಹ್ಸಿನ್ ನಖ್ವಿ ನಡುವಿನ ಸಂವಾದದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ವ್ಯಕ್ತವಾಗಿದೆ.
ಕ್ರಿಕೆಟ್ ಅಭಿಮಾನಿಗಳ ದೃಷ್ಟಿಯಿಂದ, ಭಾರತ–ಪಾಕಿಸ್ತಾನ ಪಂದ್ಯ ಟಿ20 ವಿಶ್ವಕಪ್ನ ಅತ್ಯಂತ ಆಕರ್ಷಕ ಮತ್ತು ನಿರ್ಣಾಯಕ ಪಂದ್ಯವಾಗಿದ್ದು, ಅದು ನಡೆಯದೇ ಹೋದರೆ ಟೂರ್ನಿಯ ರೋಮಾಂಚನವೇ ಕುಗ್ಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಪಿಸಿಬಿಯ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಹಲವರು ‘ಕ್ರಿಕೆಟ್ ರಾಜಕೀಯದ ಬಲಿಯಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ, ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರ ಈಗ ಪಿಸಿಬಿಗೆ ತಲೆನೋವಾಗಿ ಪರಿಣಮಿಸಿದ್ದು, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಐಸಿಸಿ ಒತ್ತಡದ ನಡುವೆ ಪಾಕಿಸ್ತಾನ ತನ್ನ ನಿಲುವು ಬದಲಾಯಿಸುವ ಸಾಧ್ಯತೆ ಹೆಚ್ಚಾಗಿದೆ. ಮುಂದಿನ ಕೆಲ ದಿನಗಳಲ್ಲಿ ಈ ವಿವಾದಕ್ಕೆ ಅಂತಿಮ ತೀರ್ಮಾನ ಸಿಗಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಮೂಡಿದೆ.